ರಥದ ಕಥೆ

ಅಂದು ಇಂದು ಎಂದಿಗೂ
ಲೋಕದ ಥರ ಒಂದೇ
ಅವತಾರಗಳಳಿದರೂ
ಕ್ರಿಸ್ತ ಬುದ್ಧ ಎಳೆದರೂ
ಒಂದೆ ಒಂದು ಇಂಚೂ ರಥ
ಸರಿಯಲಿಲ್ಲ ಮುಂದೆ.

ಅಂಥ ಇಂಥ ರಥವೆ ? ಕೊಂಚ
ಕೊರಕಲತ್ತ ಜಾರಿ
ತಪ್ಪಿತಷ್ಟೆ ದಾರಿ,
ಪಥಕೆಳೆಯಲು ಬಂದ ಧರ್ಮ ಅಲ್ಲಲ್ಲೇ ಗೋರಿ!
ಒಳಗೆ ಕುಳಿತ ದೈವದೆಲ್ಲ
ಮಹಿಮೆಯ ಅಳೆದವರೆ ಇಲ್ಲ
ರಾಮಾಯಣ ಭಾರತ ಸಹ
ನಿವಾಳಿಸಿದ ಕಾಯಿ,
ಕೃತ ತ್ರೇತರ ತಾತ, ಕಲಿಯ
ನುಡಿತಕೆ ಇದು ಬಾಯಿ

ಹಣೆಯ ಮೇಲೆ ಸಿಕಂದರರ
ಹೆಸರುಗಳನು ಬರೆಸಿದೆ,
ಬಡವರನ್ನು ಅಡಿಗೆ ಹಾಕಿ
ಕಷ್ಟದ ಕಥೆ ಹರಿಸಿದೆ,
ಮೈಯ ಸುತ್ತ ಧ್ವಜದ ಬದಲು
ಈಟಿಗಳನೆ ಸಿಗಿಸಿದೆ,
ಗುಡುಗಿನೆದೆಯೆ ನಡುಗುವಂತೆ
ಢರ್ರೆನ್ನುತ ತೇಗಿದೆ.

ಲೋಭವೆನುವ ದೇವರ
ಮೆರೆಸುತ್ತಿದೆ ಬಯಕೆಯೆಂಬ
ದೀಪ ಹಚ್ಚಿ ಸಾವಿರ,
ಪ್ರಜ್ವಲಿಸಿದೆ ಬೆಳಗಿ ಮುಖ
ಉಜ್ವಲಿಸಿದೆ ಭಕ್ತಿ
ಉಗ್ಘಡಿಸಿದೆ ಭಕ್ತಗಣ
ಉಕ್ಕುತ್ತಿದೆ ಶಕ್ತಿ

ಬೆಳಗುತ್ತಿದೆ ಬೆಂಕಿ ಹತ್ತಿ
ಗುಡಿಸಲುರಿಯ ದೀಪ
ಕಾರ್ಖಾನೆಯ ಚಿಮಣಿ ತೂರಿ
ಚೀರಿ ಬರುವ ಧೂಪ
ನೈವೇದ್ಯಕೆ ಬಡಬಗ್ಗರ
ಮಕ್ಕಳ ತಲೆಕಾಯಿ
ಬೊಬ್ಬಿರಿದಿವೆ ಭೇರಿ ನುಡಿಸಿ
ಧನಿಕರ ಮನೆ ನಾಯಿ

ದೈವಮಹಿಮೆ ಕಂಡುಕೊಂಡ
ಧನಿಕವೃಂದ
ಶಾಸನಗಳ ಬರೆಸಿಕೊಟ್ಟ
ದತ್ತಿಗಳಿವೆ ಸಾಕ್ಷಿಗೆ
ಅಂಗಭೋಗ ರಂಗಭೋಗ
ದೇವದಾಸಿ ಪೂಜೆಗೆ
ಬಿಟ್ಟ ಬಿಟ್ಟ ಹೊಲಗಳಿವೆ
ಅದ ಕಾಯುವ ಕುಲಗಳಿವೆ
ಖಾಸಾ ಭೇಟಿ ಕೊಡುವುದಿದೆ
ಪೀಠಪತಿಗಳು
ಮಹಾಮಂತ್ರಿ, ಬರೀ ಮಂತ್ರಿ
ಬೆನ್ನ ಹಿಂದೆ ಇರುವ ತಂತ್ರಿ
ಕರಿಲಕ್ಷ್ಮೀವರಪಾತ್ರ ಕರೋಡು ಪತಿಗಳು.

ಯಾಜ್ಞವಲ್ಕ್ಯ ಪೈಗಂಬರ
ಯಾರು ಯಾರೋ ಬಂದರು
ವೇದ ಖುರಾನ್ ಸನ್ನೆಗೋಲು
ಅಡಿಗೆ ಕೊಟ್ಟು ಎಳೆದರು
ಜಗ್ಗಲಿಲ್ಲ, ಕಡೆಗೆ ಬಂದ
ಹಿಗ್ಗು ನಗೆಯ ಗಾಂಧಿ
(ಮಂಗಳಗಳ ನಾಂದಿ)
ಎಳೆದ ನೋಡಿ ಒಂದೇ ಸಲ
ಉಘೇ ಉಘೇ ಮಹಾಬಲ
ಸರಿದ ಭರಕೆ ಜರುಗಿ ಚಕ್ರ
ಹೂತೆ ಹೋಯ್ತು ಪೂರ್ತಿ
ಓಂ ಶಾಂತಿಃ: ಶಾಂತಿಃ ಶಾಂತಿಃ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೩೪
Next post ಆರ್ಥಿಕ ನಾಯಕತ್ವದ ಅಪಾಯ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys